Monday, August 1, 2011

ಲೋಕಪಾಲ ಮಸೂದೆ

  ಲೋಕಪಾಲ ಮಸೂದೆ ಭ್ರಷ್ಟಾಚಾರ ವಿರೋಧಿ ಕಾನೂನನ್ನು ಜಾರಿಗೊಳಿಸಲು ಲೋಕಪಾಲರನ್ನು ನೇಮಿಸುವ ಮಸೂದೆ. ಈ ಲೋಕಪಾಲ ಸಂಸ್ಥೆಯು ಸರ್ಕಾರದ ಅನುಮತಿಯಿಲ್ಲದೆಯೇ ರಾಜಕಾರಣಿಗಳು ಮತ್ತು ಸರ್ಕಾರಿ ಅಧಿಕಾರಿಗಳನ್ನು ವಿಚಾರಣೆ ಹಾಗೂ ಶಿಕ್ಷೆಗೊಳಪಡಿಸುವ ಅಧಿಕಾರಗಳನ್ನು ಹೊಂದಿದ್ದು, ಚುನಾವಣಾ ಆಯೋಗದಂತೆಯೇ ಒಂದು ಸ್ವತಂತ್ರ ಸಂಸ್ಥೆಯಾಗಿರುತ್ತದೆ.[೧]
ಭ್ರಷ್ಟಾಚಾರ ವಿರೋಧಿ ಚಳವಳಿ - ಇಂಡಿಯಾ ಅಗೈನ್ಸ್ಟ್ ಕರಪ್ಷನ್ - ಐಏಸಿಯ ಮುಖಂಡರು ಮತ್ತು ನಾಗರಿಕ ಸಮಾಜದವರೊಂದಿಗೆ ಸಮಾಲೋಚಿಸಿ ಮಾಜಿ ಕಾನೂನು ಸಚಿವ ಹಾಗೂ ಹಿರಿಯ ವಕೀಲ ಶಾಂತಿ ಭೂಷಣ್, ನಿವೃತ್ತ ಭಾರತೀಯ ಆರಕ್ಷಕ ಸೇವೆ (ಐಪಿಎಸ್) ಅಧಿಕಾರಿ ಕಿರಣ್ ಬೇಡಿ,ಕರ್ನಾಟಕದ ಲೋಕಾಯುಕ್ತ ನ್ಯಾಯಮೂರ್ತಿ ಎನ್. ಸಂತೋಷ್ ಹೆಗ್ಡೆ, ಹಿರಿಯ ವಕೀಲ ಪ್ರಶಾಂತ್ ಭೂಷಣ್, ಮಾಜಿ ಮುಖ್ಯ ಚುನಾವಣಾಧಿಕಾರಿ ಜೆ. ಎಂ. ಲಿಂಗ್ಡೋ ಅವರು ರಚಿಸಿರುವ ಈ ಮಸೂದೆಯ ಕರಡು, ರಾಷ್ಟ್ರ ಮಟ್ಟದಲ್ಲಿ ಲೋಕಪಾಲ ಮತ್ತು ರಾಜ್ಯ ಮಟ್ಟದಲ್ಲಿ ಲೋಕಾಯುಕ್ತರನ್ನುನೇಮಿಸುವ ಪ್ರಸ್ತಾವನೆಯನ್ನು ಹೊಂದಿದೆ. ಇದು ಭ್ರಷ್ಟಾಚಾರವನ್ನು ನಿಗ್ರಹಿಸುವ ಮತ್ತು ಮಾಹಿತಿದಾರರನ್ನು ಸೂಕ್ತವಾಗಿ ರಕ್ಷಿಸುವ ಸಲುವಾಗಿ ಭ್ರಷ್ಟಾಚಾರ ವಿರೋಧಿ ಮತ್ತು ಮತ್ತು ಅನ್ಯಾಯವನ್ನು ಸರಿಪಡಿಸುವ ವ್ಯವಸ್ಥೆಯನ್ನು ಜಾರಿಗೆ ತರಲು ರೂಪಿಸಲಾಗಿದೆ.[೨]
೧೯೬೯ರಲ್ಲಿಯೇ ಮೊದಲ ಬಾರಿಗೆ ಲೋಕಪಾಲ ಮಸೂದೆಯನ್ನು ಲೋಕಸಭೆಯಲ್ಲಿ ಮಂಡಿಸಿ ಅಂಗೀಕರಿಸಲಾಗಿತ್ತಾದರೂ, ರಾಜ್ಯಸಭೆಯಲ್ಲಿ ಅದು ಒಪ್ಪಿಗೆ ಪಡೆಯಲಿಲ್ಲ. ನಂತರ ೧೯೭೧, ೧೯೭೭, ೧೯೮೫, ೧೯೮೯, ೧೯೯೬, ೧೯೯೮, ೨೦೦೧, ೨೦೦೫ ಮತ್ತು ೨೦೦೮ರಲ್ಲಿ ಮತ್ತೆ ಮಂಡಿಸಲಾಗಿಯಿತಾದರೂ ಅದು ಅಂಗೀಕಾರವಾಗಿರಲಿಲ್ಲ. ಅಣ್ಣಾ ಹಜಾರೆಯವರ ನಾಲ್ಕು ದಿನದ ಉಪವಾಸದ ನಂತರ ಪ್ರಧಾನಿ ಮನಮೋಹನ ಸಿಂಗ್‌ರವರು ೨೦೧೧ರ ಮುಂಗಾರು ಅಧಿವೇಶನದಲ್ಲಿ ಇದನ್ನು ಲೋಕಸಭೆಯಲ್ಲಿ ಮಂಡಿಸಲಾಗುವುದೆಂದು ಹೇಳಿದರು.

ಹಿಂದೂ ವಿವಾಹ ನೊಂದಣಿ ಅಧಿಕಾರಿ ನೇಮಕಾತಿ ಯಾಕಿಲ್ಲ?



ವಿವಾಹ ನೋಂದಣಿಯನ್ನು ಇತ್ತೀಚಿನ ದಿನಗಳಲ್ಲಿ ಕಡ್ಡಾಯವಾಗಿ ಅನುಸರಿಸಲಾಗುತ್ತಿದೆ. ವಿದೇಶಕ್ಕೆ ಹೋಗುವ ದಂಪತಿಗಳಿಗೆ ಸೀಮಿತವಾಗಿದ್ದ ಈ ನೋಂದಣಿ ಈಗ ಇತರ ಮದುವೆಯ ಸಂದರ್ಭಗಳಲ್ಲಿ ಕೂಡ ಅನುಸರಿಸಲಾಗುತ್ತಿದೆ. ವಿವಾಹವನ್ನು ಅಧಿಕೃತಗೊಳಿಸುವ ಕಾನೂನುಬದ್ಧ ಕ್ರಮವೇ ಈ ವಿವಾಹ ನೊಂದಣಿ.
ಹಿಂದೂ, ಮುಸ್ಲಿ ಮತ್ತು ಕ್ರೈಸ್ತ ಧರ್ಮಗಳಲ್ಲಿನ ನಿಯಮಗಳು ಆಯಾ ಧರ್ಮಕ್ಕನುಗುಣವಾಗಿದೆ. ಇದನ್ನು ಅನುಸರಿಸಿ, ಮುಸ್ಲಿಂ ವಿವಾಹಗಳ ನೋಂದಣಿ ಅಧಿಕಾರವನ್ನು ಆಯಾ ಮಸೀದಿಗಳಿಗೆ ನೀಡಲಾಗಿದೆ. ಅದೇ ರೀತಿ ಕ್ರೈಸ್ತ ಧರ್ಮೀಯರ ವಿವಾಹ ನೋಂದಣಿಗಾಗಿ ನೋಟರಿಗಳಲ್ಲಿ ಅವಕಾಶವಿದೆ ಮತ್ತು ಕ್ರೈಸ್ತ ಧರ್ಮೀಯರ ವಿವಾಹ ನೋಂದಣಿ ಅಧಿಕಾರಿಯನ್ನಾಗಿ ಕ್ರೈಸ್ತ ಧರ್ಮಕ್ಕೆ ಸೇರಿದ ನ್ಯಾಯವಾದಿ ನೋಟರಿಗಳ ನೇಮಕಾತಿಯನ್ನು ಸರಕಾರ ಮಾಡಿದೆ.
ಆದರೆ ಹಿಂದೂ ವಿವಾಹ ನೋಂದಣಿಯನ್ನು ಉಪ ನೋಂದಣಿ ಕಚೇರಿಗಳಲ್ಲಿ ಮಾಡಬೇಕಾಗಿದೆ. ಹಿಂದೂ ವಿವಾಹ ನೋಂದಣಿಯನ್ನು ನೋಟರಿಯವರ ಬಳಿ ಮಾಡಿಕೊಳ್ಳುವ ಕಾನೂನು ಇಲ್ಲಿ ಇಲ್ಲ. ಈ ಕಾರಣದಿಂದಾಗಿ ವಿವಾಹ ನೋಂದಣಿಗಾಗಿ ಹಿಂದೂ ಧರ್ಮೀಯರು ಉಪ ನೋಂದಣಿ ಕಚೇರಿಗೆ ಅಲೆದಾಡುವ, ತಾಸುಗಟ್ಟಲೆ ಸರದಿಯ ಸಾಲಲ್ಲಿ ಕಾಯುವ ಪ್ರಮೇಯವನ್ನು ಎದುರಿಸಬೇಕಾಗಿದೆ. ಕ್ರೈಸ್ತ ಮತ್ತು ಮುಸ್ಲಿಂ ಧರ್ಮೀಯರಿಗೆ ವಿವಾಹ ನೋಂದಣಿ ಸಂದರ್ಭದಲ್ಲಿ ಈ ತಾಪತ್ರಯವಿರುವುದಿಲ್ಲ.
ನೇಮಕಾತಿ ಸಾಧ್ಯ
ಹಿಂದೂ ವಿವಾಹ ನೋಂದಣಿ ಅಧಿಕಾರಿಯನ್ನಾಗಿ ನೋಟರಿ ವಕೀರನ್ನು ನೇಮಕಗೊಳಿಸಲು ಯಾವುದೇ ಹೆಚ್ಚಿನ ಕಾನೂನು ತೊಡಕುಗಳಿಲ್ಲ. ಹಿಂದೂ ವಿವಾಹ ಕಾಯಿದೆಯ ಸೆಕ್ಷನ್‌ 5ಕ್ಕೆ ಸೂಕ್ತ ತಿದ್ದುಪಡಿ ತಂದು ವಿವಾಹ ನೋಂದಣಿ ನಿಯಮಾವಳಿಗಳನ್ನು ಜಾರಿಗೆ ತಂದಲ್ಲಿ ಹಿಂದೂ ವಿವಾಹ ನೋಂದಣಿ ಅಧಿಕಾರಿಗಳನ್ನು ನೇಮಕ ಮಾಡಲು ರಾಜ್ಯ ಸರಕಾರಕ್ಕೆ ಅಧಿಕಾರವಿದೆ.
ಹಿಂದೂ ವಿವಾಹ ನೋಂದಣಿ ಅಧಿಕಾರಿ ನೇಮಕ ಮತ್ತು ವಿವಾಹ ಕಾಯಿದೆಯ ಸೆ. 5ಕ್ಕೆ ತಿದ್ದುಪಡಿ ತರುವಂತೆ ಒತ್ತಾಯಿಸಿ, ಪುತ್ತೂರಿನ ನಾಗರಿಕ ಹಕ್ಕುಗಳ ಕಾರ್ಯಕರ್ತ ಡಿ.ಕೆ. ಭಟ್‌ ಅವರು ಕಳೆದ 5 ವರ್ಷಗಳಿಂದ ಸರಕಾರಕ್ಕೆ ಕನಿಷ್ಠ 70 ಪತ್ರಗಳನ್ನು ಬರೆದಿದ್ದಾರೆ. ಶಾಸಕರು ಮತ್ತು ಸಚಿವರುಗಳ ಮೂಲಕ ಒತ್ತಡ ತರುವಂತೆ ಪ್ರಯತ್ನ ಮಾಡಿದ್ದಾರೆ. ಆದರೆ ರಾಜ್ಯ ಸರಕಾರ ಈ ಕುರಿತು ಯಾವುದೇ ಕ್ರಮಗಳನ್ನು ಕೈಗೊಂಡಿಲ್ಲ.
ವಿವಾಹವಾದ ಸಭಾಮಂಟಪ ಅಥವಾ ಸ್ಥಳದ ಮುಖ್ಯಸ್ತರ ಪತ್ರ, ಪುರೋಹಿತರ ಧೃಢೀಕರಣ ಪತ್ರ ಮತ್ತು ಎರಡೂ ಕಡೆಯವರ ಹೆತ್ತವರ ಒಪ್ಪಿಗೆ ಪತ್ರಗಳನ್ನು ಅರ್ಜಿಯೊಂದಿಗೆ ಹಾಜರುಪಡಿಸಿ ವಿವಾಹ ನೋಂದಣಾಧಿಕಾರಿಗಳಲ್ಲಿ ಸರಳವಾಗಿ ವಿವಾಹವನ್ನು ನೋಂದಣಿ ಮಾಡಿಕೊಳ್ಳಲು ಸೆಕ್ಷನ್‌ 5ಕ್ಕೆ ತಿದ್ದುಪಡಿ ತಂದಲ್ಲಿ ಸುಲಭ ಸಾಧ್ಯ ಎಂದು ಡಿ.ಕೆ. ಭಟ್‌ ಅಭಿಪ್ರಾಯಪಡುತ್ತಾರೆ. ಆದರೆ ಈ ವಿಚಾರದ ಕುರಿತಂತೆ ರಾಜ್ಯ ಸರಕಾರವು ಇಲ್ಲಿಯ ತನಕ ಯಾವುದೇ ಆಸಕ್ತಿ ತೋರ್ಪಡಿಸಿಲ್ಲ.
ಇತ್ತೀಚಿನ ದಿನಗಳಲ್ಲಿ ಎಲ್ಲ ಉಪ ನೊಂದಣಿ ಕಚೇರಿಗಳಲ್ಲೂ ಕೆಲಸದ ಒತ್ತಡಗಳು ಹೆಚ್ಚಾಗುತ್ತಿರುವ ಹಿನ್ನೆಲೆಯಲ್ಲಿ ಹಿಂದೂ ನ್ಯಾಯವಾದಿ ನೋಟರಿಗಳನ್ನು ವಿವಾಹ ನೋಂದಣಿ ಅಧಿಕಾರಿಗಳನ್ನಾಗಿ ನೇಮಕ ಮಾಡುವ ಅನಿವಾರ್ಯ ಹೆಚ್ಚಿದೆ. ಕಾನೂನುಬದ್ಧ ನಿಯಮಗಳನ್ನು ಜಾರಿಗೊಳಿಸುವ ಮೂಲಕ ಈ ವ್ಯವಸ್ಥೆಯನ್ನು ಅನುಷ್ಠಾನಮಾಡಿದರೆ ಅನಗತ್ಯ ಅಲೆದಾಟ ತಪ್ಪಿದಂತಾಗುತ್ತದೆ. ರಾಜ್ಯ ಸರಕಾರ ಇನ್ನಾದರೂ ಇಂತಹ ಕ್ರಮಗಳಿಗೆ ಮುಂದಾಗಬಹುದು ಎಂದು ಡಿ.ಕೆ. ಭಟ್‌ ಆಶಯ ವ್ಯಕ್ತಪಡಿಸಿದ್ದಾರೆ