Saturday, December 24, 2011

ಭೂಸ್ವಾಧೀನ ಕಾಯ್ದೆ: ವಸಾಹತುಶಾಹಿಯ ಪಳೆಯುಳಿಕೆ

http://www.prajavani.net/web/include/story.php?news=2042§ion=170&menuid=14



1894ರಲ್ಲಿ ಬ್ರಿಟಿಷರು ಈ ಭೂಸ್ವಾಧೀನ ಕಾಯ್ದೆಯನ್ನು ಜಾರಿಗೆ ತಂದರು ಎನ್ನುವುದು ಚರಿತ್ರೆಯ ಪುಟಗಳನ್ನು ತಿರುವಿದಾಗ ನಮಗೆ ತಿಳಿದು ಬರುತ್ತದೆ. ರೈಲು ಸಂಚಾರ, ನೀರಾವರಿ ಯೋಜನೆ, ಹಿಮಾಲಯ ಪ್ರಾಂತ್ಯದಿಂದ ಮರದ ದಿಮ್ಮಿಗಳನ್ನು ಸಾಗಿಸುವುದು ಮುಂತಾದ ಸಾರ್ವಜನಿಕ ಯೋಜನೆಗಳಿಗಾಗಿ ಭೂಮಿ ಅಗತ್ಯವೆನಿಸಿದ್ದ ವೇಳೆ ತಕ್ಷಣವೇ ಭೂಮಿಯನ್ನು ವಶಪಡಿಸಿಕೊಳ್ಳುವ ಸಲುವಾಗಿ ಅವರು ಈ ಕಾಯ್ದೆಯನ್ನು ಜಾರಿಗೆ ತಂದರು.

ಹೀಗಾಗಿಯೇ ಅವರು ಇಂತಹ ಸ್ವಾಧೀನ ಪ್ರಕ್ರಿಯೆಯಲ್ಲಿ ಬ್ರಿಟಿಷ್ ಆಡಳಿತಕ್ಕೆ ಪರಮಾಧಿಕಾರದ ಅಗತ್ಯವನ್ನು ಒತ್ತಿಹೇಳುತ್ತಾ ಇದನ್ನು ಬಲವಾದ ಕಾರ್ಯವಿಧಾನವುಳ್ಳ ಕಾನೂನಾಗಿ ಮಾರ್ಪಡಿಸಿದರು.

ಈ ಕಾಯ್ದೆ ಕೇಂದ್ರ ಮತ್ತು ರಾಜ್ಯ ಸರ್ಕಾರಗಳಿಗೆ ಅನುಕೂಲಕರವಾಗಿದ್ದರಿಂದ ಅದು ಹಾಗೆಯೇ ಮುಂದುವರಿದುಕೊಂಡು ಬಂತು. ಇದರಲ್ಲಿ ರಾಜ್ಯ ಸರ್ಕಾರದ ಪಾತ್ರವೇನೂ ಅದರಲ್ಲಿರಲಿಲ್ಲ.

ಸ್ವಾತಂತ್ರ್ಯ ದೊರೆತು 60ಕ್ಕೂ ಹೆಚ್ಚು ವರ್ಷಗಳು ಸಂದರೂ ಇಂದಿನವರೆಗೆ ಭೂಸ್ವಾಧೀನ ಪ್ರಕ್ರಿಯೆಗೆ ಸಂಬಂಧಿಸಿದಂತೆ ರಾಜ್ಯ ಸರ್ಕಾರ ಯಾವುದೇ ಕಾನೂನು ರೂಪಿಸಿದ್ದು ನಮಗೆ ತಿಳಿದಿಲ್ಲ. ವಸಾಹತುಶಾಹಿ ಆಡಳಿತವಿದ್ದಾಗ ಇದನ್ನು `ಭೂ ಸ್ವಾಧೀನ` ಎಂದು ಕರೆಯುವುದು ಸರಿ ಎನಿಸಿತ್ತು. ಆದರೆ, ಕಳೆದ ದಶಕಗಳಲ್ಲಿ ಸಾಂಪ್ರದಾಯಿಕ ನಡವಳಿಕೆಯಂತೆ ನಡೆದುಕೊಂಡು ಬಂದಿರುವ ಈ ಸ್ವಾಧೀನ ಪ್ರಕ್ರಿಯೆ ಎಂಬ ಚಿಂತನೆಯೇ ಅಸಾಂವಿಧಾನಿಕವಾಗಿದೆ.


ಹಾಗಾಗಿ ಈಗ ನೀವೇನು ಮಾಡಬಹುದು. ಸ್ವಾಧೀನದ ಬದಲಾಗಿ ಮನವಿಯ ಮೊರೆ ಹೋಗಬೇಕಾಗುತ್ತದೆ. ಭೂಮಿಯ ಒಡೆಯನಿಂದ ನಿಮಗೆ ಆ ಭೂಮಿಯನ್ನು ಪಡೆಯುವುದು ಅತ್ಯವಶ್ಯಕವಾಗಿದೆ. ಅದೇ ವೇಳೆ ಆ ಭೂಮಾಲಿಕರ ಹಕ್ಕುಗಳನ್ನು ನೀವು ಒಪ್ಪಿಕೊಳ್ಳಲೇ ಬೇಕು.

ಯಾವುದೇ ಒಂದು ಸಂಸ್ಥೆ, ಗಣಿ ಕಂಪನಿಯೇ ಆಗಿರಲಿ ಅಥವಾ ದೊಡ್ಡ ವಿದ್ಯುತ್ ಉತ್ಪಾದನಾ ಯೋಜನೆಯೇ ಆಗಿರಲಿ, ಅದು ತನ್ನ ಕಾರ್ಯಯೋಜನೆಗಳಿಗಾಗಿ ಭೂಮಾಲಿಕ ತನ್ನ ಭೂಮಿಯನ್ನು ಅಥವಾ ಸಂಪನ್ಮೂಲಗಳನ್ನು ಬಿಟ್ಟುಕೊಡಬೇಕೆಂದು ಮನವಿ ಮಾಡಿಕೊಳ್ಳುತ್ತದೆ. ಆದರೆ, ಅದರಿಂದ ಅವರು ಅನುಭವಿಸಬೇಕಾದ ಸಂಕಷ್ಟಗಳು, ಜೀವನಾಧಾರ ಕಳೆದುಕೊಳ್ಳುವ ಭೀತಿ, ತನ್ನ ಸಮುದಾಯ ಮತ್ತು ತಾನು ಹೊಂದಿದ್ದ ಭೂಮಿಯಿಂದ ಬೇರ್ಪಡಬೇಕಾದ ಮನೋವೇದನೆ, ಪುನರ್ವಸತಿ ಸಮಸ್ಯೆ ಇವುಗಳೆಲ್ಲದಕ್ಕೂ ನಿರ್ದಿಷ್ಟ ಸಂಸ್ಥೆ ಅಥವಾ ಸರ್ಕಾರ ಪರಿಹಾರವನ್ನು ನೀಡಲು ಒಪ್ಪಿಕೊಳ್ಳುತ್ತದೆ.

ಅದಕ್ಕಾಗಿ ನೂರು ವರ್ಷಗಳಷ್ಟು ಹಳೆಯದಾದ ಕಾಯ್ದೆಯಲ್ಲಿ ಹಲವು ರಾಜ್ಯ ಸರ್ಕಾರಗಳು ಸರಿಸಮಾನವಾದ ನಿಯಮಗಳನ್ನು ಅಳವಡಿಸಿಕೊಳ್ಳಲು ಸಾಧ್ಯವಾಗುವ ಮಾದರಿಯಲ್ಲಿ ಪುನರ್‌ನವೀಕರಿಸಬೇಕಾದ ಅಗತ್ಯವಿದೆ.

ರಾಜಸ್ತಾನಕ್ಕೆ ಅನ್ವಯಿಸುವುದೆಲ್ಲವೂ ಹಿಮಾಚಲ ಪ್ರದೇಶಕ್ಕೆ ಅನ್ವಯಿಸಲಾರದು. ಪ್ರಸ್ತುತ ಮಸೂದೆಯನ್ವಯ ಒಟ್ಟಾಗಿ 100 ಎಕರೆಯನ್ನು ಸ್ವಾಧೀನಪಡಿಸಿಕೊಂಡಲ್ಲಿ ಮಾತ್ರ ಪುನರ್ವಸತಿಗೆ ಸಂಬಂಧಿಸಿದ ನಿಯಮಗಳನ್ನು ಅಳವಡಿಸಿಕೊಳ್ಳಲು ಸಾಧ್ಯ. ಆದರೆ ಪರ್ವತ ಪ್ರದೇಶದಲ್ಲೇ ಆಗಲಿ, ಅಥವಾ ಪಶ್ಚಿಮ ಘಟ್ಟದಲ್ಲೇ ಆಗಲಿ 100 ಎಕರೆ ಎನ್ನುವುದು ಬಹು ದೊಡ್ಡ ಪ್ರಮಾಣವೇ ಸರಿ.

ಹೀಗೆ ಜನರನ್ನು ಸ್ಥಳಾಂತರಿಸಿ ಪುನರ್ವಸತಿ ಕಲ್ಪಿಸಿಕೊಟ್ಟಲ್ಲಿ ಆಯಾ ಪ್ರದೇಶಗಳ ನೂರಾರು ವರ್ಷಗಳಷ್ಟು ಹಳೆಯದಾದ ಸಮುದಾಯಗಳೇ ಕಣ್ಮರೆಯಾಗುತ್ತವೆ. ಈ ಕಾರಣಕ್ಕೆ ರಾಜ್ಯ ಸರ್ಕಾರಗಳು ಇಂತಹ ಭೂ ಸ್ವಾಧೀನ ಪ್ರಕ್ರಿಯೆಯ ಸೂಕ್ಷ್ಮತೆ ಅರಿತುಕೊಳ್ಳಬೇಕಾಗಿದೆ. ನವದೆಹಲಿಯ ಕಾರಿಡಾರ್‌ಗಳಲ್ಲಿ ಕುಳಿತು ಕಾನೂನು ಜಾರಿಗೊಳಿಸುವ ಬದಲಾಗಿ ಕನಿಷ್ಠ ಪಕ್ಷ ಸ್ಥಳೀಯಾಡಳಿತವಾದರೂ ಸ್ಥಳೀಯ ಪರಿಸ್ಥಿತಿಗಳನ್ನು ಅರ್ಥಮಾಡಿಕೊಳ್ಳಬೇಕಾಗಿದೆ.


ಕ್ಷಿಪ್ರಗತಿಯಲ್ಲಿ ಬೆಳೆಯುತ್ತಿರುವ ಪ್ರಸ್ತುತ ಆರ್ಥಿಕ ವ್ಯವಸ್ಥೆಯಲ್ಲಿ ಅತಿಯಾದ ಕಾರ್ಯವಿಧಾನಗಳಿಂದಾಗಿ ಕೇಂದ್ರದ ಕಾಯ್ದೆಗೆ ತನ್ನ ಉದ್ದೇಶವನ್ನು ಈಡೇರಿಸುವುದು ಕಷ್ಟ. ಕಲ್ಲಿದ್ದಲ್ಲಿನ ಬೇಡಿಕೆ, 2030ರ ವೇಳೆಗೆ ಪ್ರಸ್ತುತ ಇರುವ 300 ದಶಲಕ್ಷ ಟನ್‌ಗಳಿಂದ 2 ಶತಕೋಟಿ ಟನ್‌ಗಳಿಗೆ ತಲುಪಲಿದೆ. ಇನ್ನು ಕಬ್ಬಿಣದ ಅದಿರು, ಬಾಕ್ಸೈಟ್ ಮುಂತಾದ ಹಲವು ಯೋಜನೆಗಳು ಅಗತ್ಯವಾಗಿವೆ. ಈ ಯೋಜನೆಗಳಿಗೆಲ್ಲ ಅಗತ್ಯವಾದ ಭೂಮಿಯನ್ನು `ಮಾನವೀಯ ಮುಖ`ದ ನೆಲೆಯಲ್ಲಿ ವಶಕ್ಕೆ ತೆಗೆದುಕೊಳ್ಳಬೇಕಾಗಿದೆ.

ವಿಶ್ವದ ಉಳಿದೆಲ್ಲ ದೇಶಗಳು ನಮಗೆ ಕಲಿಸುತ್ತಿರುವ ಪಾಠವಾದರೂ ಏನು. ಈ ಹಿನ್ನೆಲೆಯಲ್ಲಿ ವಿಶ್ವಸಂಸ್ಥೆ `ಮುಕ್ತವಾದ, ಆದ್ಯತೆಯ, ಮಾಹಿತಿಪೂರ್ಣ ಒಪ್ಪಂದವನ್ನು ರೈತರಿಂದ ಬಯಸಿದೆ. ಅಂದರೆ ಸರ್ಕಾರವಾಗಲಿ, ಸಂಸ್ಥೆಯಾಗಲಿ ರೈತರ ಬಳಿ ತೆರಳಿ `ನಮ್ಮ ಯೋಜನೆಗಳಿಗೆ ಇಂತಿಷ್ಟು ಭೂಮಿ ಬೇಕು ಎಂದು ಹೇಳುವಂತಿಲ್ಲ. ಬದಲಾಗಿ ` ಈ ಭೂಮಿ ನಮಗೆ ಬೇಕಾಗಿದೆ` ಎನ್ನುತ್ತಾ ಅದರ ಪರಿಣಾಮಗಳನ್ನು ವಿವರಿಸಬೇಕು.

`ಈ ಯೋಜನೆಯಿಂದ ಇಂತಿಷ್ಟು ಅರಣ್ಯ ಪ್ರದೇಶ ನಾಶವಾಗುತ್ತದೆ, ಇಂತಿಷ್ಟು ಪ್ರಮಾಣದ ನೀರಿನ ಅಗತ್ಯವಿದೆ. ಜನ ಸ್ಥಳಾಂತರಗೊಳ್ಳಬೇಕಾಗುತ್ತದೆ. ದೂಳು ಏಳುತ್ತದೆ ಎನ್ನುವುದನ್ನು ಸರ್ಕಾರ ವಿವರಿಸಬೇಕಾಗುತ್ತದೆ.

ಸರ್ಕಾರವಾಗಲಿ, ಸಂಸ್ಥೆಯಾಗಲಿ ಏನು ಮಾಡುತ್ತಿದೆ ಎಂದು ಜನ ತಿಳಿದುಕೊಳ್ಳುವಂತಾಗಬೇಕು. ಒಂದು ಸಮುದಾಯ ಮತ್ತು ಅವರು ಹೊಂದಿರುವ ಪರಂಪರಾಗತವಾದ ಮತ್ತು ಫಲವತ್ತಾದ ಭೂಮಿ ಮತ್ತು ಅದರ ಸುತ್ತಲಿನ ಅರಣ್ಯಕ್ಕಾಗುವ ಧಕ್ಕೆ ಮತ್ತು ಎದುರಿಸಬೇಕಾದ ಸವಾಲುಗಳನ್ನು ಜನ ತಿಳಿದುಕೊಳ್ಳಬೇಕಾದುದು ಅಗತ್ಯವಾಗಿದೆ.

ಒಂದು ಯೋಜನೆಗೆ ಅಗತ್ಯವಾದ ಭೂಮಿಯನ್ನು ನೀವು ಹೇಗೆ ಅಳತೆ ಮಾಡುವಿರಿ. ಎರಡು ದಶಕಗಳ ಹಿಂದೆ ಹಾಜಿರಾ-ಬಿಜೈಪುರ-ಜಗದೀಶ್‌ಪುರ ಕೊಳವೆ ಮಾರ್ಗ ಯೋಜನೆಯನ್ನು ಕೈಗೆತ್ತಿಕೊಂಡಾಗ ಕೇವಲ ಏಳು ರಾಸಾಯನಿಕ ಕಾರ್ಖಾನೆಗಳಿದ್ದವು. ಹೆಚ್ಚು ಕಡಿಮೆ ಇಟಲಿಯ ತಂತ್ರಜ್ಞಾನದಿಂದ ಕಾರ್ಯನಿರ್ವಹಿಸುತ್ತಿದ್ದ ಈ ಎಲ್ಲಾ ಘಟಕಗಳು ಪ್ರತಿ ದಿನ 1,350 ಟನ್ ರಾಸಾಯನಿಕ ಉತ್ಪಾದಿಸುತ್ತಿದ್ದವು.

ಎಚ್‌ಬಿಜೆ ಘಟಕಗಳ ಸರಣಿಯಲ್ಲೇ ಐಎಫ್‌ಎಫ್‌ಸಿಒ 376 ಎಕರೆ ಪ್ರದೇಶದಲ್ಲಿ ಕಾರ್ಯ ನಿರ್ವಹಿಸುತ್ತಿದೆ. ಇಂಡೋ-ಗಲ್ಫ್ ರಾಸಾಯನಿಕ ಕಾರ್ಖಾನೆ 672 ಎಕರೆ ಪ್ರದೇಶದಲ್ಲಿ ಹರಡಿಕೊಂಡಿದ್ದರೆ ಎನ್‌ಎಫ್‌ಎಲ್ 700 ಎಕರೆ ಪ್ರದೇಶವನ್ನು ಹೊಂದಿದೆ. ಇದೇ ವೇಳೆ ಟಾಟಾ 2100 ಎಕರೆ ಪ್ರದೇಶವನ್ನು ಹೊಂದಿದೆ.

ಹೊಸ ಗಣಿ ಮಸೂದೆ ಅನ್ವಯ ಯಾವುದೇ ಒಂದು ಗುತ್ತಿಗೆಯ ಪ್ರಕಾರ ಯಂತೆ 100 ಚದರ ಕಿ. ಮಿ ಪ್ರದೇಶದಲ್ಲಿ ಮಾತ್ರ ಗಣಿಗಾರಿಕೆ ನಡೆಸಬಹುದು. ಆದರೆ ಕಂಪನಿಗಳು ಮಾಡುತ್ತಿರುವುದಾದರೂ ಏನನ್ನು? ಒಂದು ಗುತ್ತಿಗೆಯ ಮೂಲಕ ಮತ್ತೊಂದು ಪ್ರದೇಶದಲ್ಲಿ ಗಣಿಗಾರಿಕೆ ನಡೆಸುವುದಲ್ಲದೆ ಎರಡು ಪ್ರದೇಶಗಳ ಸೂಕ್ಷ್ಮ ಪರಿಸರ ವ್ಯವಸ್ಥೆಯ ನಾಶಕ್ಕೆ ಕಾರಣವಾಗುತ್ತಿವೆ.

ಸೂಕ್ಷ್ಮ ಪರಿಸರದ ಹಾನಿ ಮತ್ತು ಭೂಸ್ವಾಧೀನ ಪಡಿಸಿಕೊಳ್ಳುವ ಸರ್ಕಾರ ಮತ್ತು ಸಂಸ್ಥೆಗಳ ಶ್ರಮವನ್ನು ತಡೆಯುವಲ್ಲಿ ಕಾನೂನುಗಳಿದ್ದರೂ ಕೂಡ ಸ್ಥಳೀಯಾಡಳಿತದ ಇಚ್ಛಾ ಶಕ್ತಿಯ ಕೊರತೆಯಿಂದ ಅದು ತನ್ನ ಉದ್ದೇಶ ಸಾಧನೆಯಿಂದ ದೂರ ಸರಿದಿದೆ.


ಇವೆಲ್ಲವೂ ಖಂಡಿತವಾಗಿ ಬಹಳ ಸಂಕೀರ್ಣವಾದ ಸಮಸ್ಯೆಗಳೇ ಹೌದು. ಆದರೆ, ಭೂ ಸ್ವಾಧೀನದಷ್ಟೇ ಹಳೆಯದಾದ ಇಂಥ ವ್ಯವಸ್ಥೆಗೆ ರಚನಾತ್ಮಕವಾದ ಬದಲಾವಣೆ ಮಾಡಬೇಕೆನ್ನುವ ಪ್ರತಿಯೊಂದು ಸಲಹೆಯಲ್ಲಿ ಅಡಗಿರುವ ಸವಾಲುಗಳನ್ನು ಪರಿಣತರು ಕಂಡುಕೊಳ್ಳಬೇಕಾಗಿದೆ.

ರೈತರಿಗೆ ಯಾವುದು ಪ್ರಯೋಜನಕಾರಿ? ಸರ್ಕಾರ ಮತ್ತು ಆಡಳಿತ ವ್ಯವಸ್ಥೆಯ ಭ್ರಷ್ಟಾಚಾರದಿಂದಾಗಿ ಲಕ್ಷಗಟ್ಟಲೆ ಜನರ ನರಳುತ್ತ್ದ್ದಿದಾರೆ. ಸರ್ಕಾರದ ಈ ಘೋರ ಮುಖವನ್ನು ಹೊರಗೆಳೆಯುವುದಾದರೂ ಹೇಗೆ?. ಅಣ್ಣಾ ಹಜಾರೆ ಅವರು ಕೇಳುತ್ತಿರುವ ಪ್ರಶ್ನೆಯೂ ಇದೇ.