Thursday, August 18, 2011

ಬೇಕಾಬಿಟ್ಟಿ ವರ್ಗ :ಉಗಿಸಿಕೊಂಡ ರಾಜ್ಯ ಸರ್ಕಾರ

http://www.prajavani.net/web/include/story.php?news=36328&section=5&menuid=10


ಬೆಂಗಳೂರು: ಬಿಬಿಎಂಪಿಯಲ್ಲಿ ಕೆಲಸ ನಿರ್ವಹಿಸುವ ಎಂಜಿನಿಯರ್‌ಗಳನ್ನು ನಿಯೋಜನೆ ಆಧಾರದ ಮೇಲೆ ಬೇರೆ ಬೇರೆ ಇಲಾಖೆಗಳಿಗೆ ವರ್ಗಾವಣೆ ಮಾಡುತ್ತಿರುವ ಕ್ರಮಕ್ಕೆ ಹೈಕೋರ್ಟ್ ಬುಧವಾರ ತೀವ್ರ ಅಸಮಾಧಾನ ವ್ಯಕ್ತಪಡಿಸಿತು.

ವಿಚಾರಣೆಗೆ ಸಂಬಂಧಿಸಿದಂತೆ ಹಾಜರು ಇದ್ದ ಕಾನೂನು ಇಲಾಖೆಯ ಕಾರ್ಯದರ್ಶಿಗಳನ್ನು ಉದ್ದೇಶಿಸಿದ ನ್ಯಾಯಮೂರ್ತಿ ಕೆ.ಎಲ್.ಮಂಜುನಾಥ ನೇತೃತ್ವದ ವಿಭಾಗೀಯ ಪೀಠ, `ನಿಮ್ಮ ಮಗುವನ್ನು ಬೇರೆಯವರ ಮನೆಯಲ್ಲಿ ಉಳಿಯಲು ಹೇಗೆ ಬಿಡುತ್ತೀರಿ, ನಿಮಗೆ ಮಕ್ಕಳು ಹೆಚ್ಚಾಗಿದ್ದರೆ ಮಾತ್ರ ನೀವು ಈ ರೀತಿ ಮಾಡಬಹುದು ಅಷ್ಟೇ.

ನೀವು ಈ ರೀತಿ ನಿಮ್ಮ ಎಂಜಿನಿಯರ್‌ಗಳನ್ನು ಬೇರೆ ಇಲಾಖೆಗೆ ಕಳುಹಿಸುತ್ತಿದ್ದೀರಿ ಎಂದರೆ ಬಿಬಿಎಂಪಿಯಲ್ಲಿ ಎಂಜಿನಿಯರ್‌ಗಳ ಸಂಖ್ಯೆ ಹೆಚ್ಚು ಇದೆ ಎಂದ ಹಾಗಾಯಿತು.

`ಒಂದೆಡೆ ಸಿಬ್ಬಂದಿ ಕೊರತೆ ಎನ್ನುತ್ತೀರಿ, ಇನ್ನೊಂದೆಡೆ ಅವರನ್ನು ನಿಯೋಜನೆ ಆಧಾರದ ಮೇಲೆ ಬೇರೆಡೆ ಕಳುಹಿಸುತ್ತೀರಿ , ಸ್ವಾತಂತ್ರ್ಯ ಬಂದು ಇಷ್ಟು ವರ್ಷಗಳಾದರೂ ಇದುವರೆಗೆ ವರ್ಗಾವಣೆ ನೀತಿ ಪಾಲನೆ ಆಗದೇ ಇರುವುದು ಶೋಚನೀಯ.ಇದನ್ನೆಲ್ಲ ಗಮನಿಸಿದರೆ, ಈ ರೀತಿಯ ವರ್ಗಾವಣೆ ಹಿಂದೆ ಬೇರೆಯೇ ಏನೋ ಕೆಲಸ ಮಾಡುತ್ತಿದೆ ಎಂದು ಅನಿಸುತ್ತಿದೆ` ಎಂದು ತಿಳಿಸಿತು.

`ಶಿಕ್ಷಕರನ್ನೂ ಇದೇ ರೀತಿ ನಿಯೋಜನೆ ಆಧಾರದ ಮೇಲೆ ಬೇರೆ ಬೇರೆ ಇಲಾಖೆಗಳಿಗೆ ಕಳುಹಿಸಲಾಗುತ್ತದೆ. ವರ್ಷಗಟ್ಟಲೆ ಬೇರೆ ಇಲಾಖೆಗಳಲ್ಲಿ ಕೆಲಸ ನಿರ್ವಹಿಸುವ ಅವರು, ಶಿಕ್ಷಕ ವೃತ್ತಿಯನ್ನೇ ಮರೆಯುತ್ತಾರೆ.    ಎಂಜಿನಿಯರಿಂಗ್ ಕೋರ್ಸ್ ಮಾಡಿದವರನ್ನು ಬೇರೆ ಇಲಾಖೆಗಳಿಗೆ ವರ್ಗಾವಣೆ ಮಾಡುವುದು ಎಂದರೆ ಏನರ್ಥ` ಎಂದು ನ್ಯಾಯಮೂರ್ತಿಗಳು ಸರ್ಕಾರವನ್ನು ತರಾಟೆಗೆ ತೆಗೆದುಕೊಂಡರು. ಈ ರೀತಿಯ ವರ್ಗಾವಣೆಯನ್ನು ಪ್ರಶ್ನಿಸಿ ಕುಬೇರಪ್ಪ ಹಾಗೂ ಇತರರು ಸಲ್ಲಿಸಿರುವ ಅರ್ಜಿಯ ವಿಚಾರಣೆಯನ್ನು ನ್ಯಾಯಮೂರ್ತಿಗಳು ನಡೆಸುತ್ತಿದ್ದಾರೆ.

ಮಂಗಳವಾರ ವಿಚಾರಣೆ ವೇಳೆ, ಬಿಬಿಎಂಪಿ ಆಯುಕ್ತರ ಖುದ್ದು ಹಾಜರಿಗೆ ಪೀಠ ನಿರ್ದೇಶಿಸಿತ್ತು. ಅವರು ಹಾಜರು ಇರುವುದು ಬಿಟ್ಟು, ಕಾನೂನು ಇಲಾಖೆ ಕಾರ್ಯದರ್ಶಿಗಳು ಹಾಜರು ಇದ್ದರು.
ಈ ಬಗ್ಗೆಯೂ ನ್ಯಾಯಮೂರ್ತಿಗಳು ಅಸಮಾಧಾನ ವ್ಯಕ್ತಪಡಿಸಿದರು. ವಿಚಾರಣೆಯನ್ನು ಇದೇ 19ಕ್ಕೆ ಮುಂದೂಡಿದ ಅವರು, ಅಂದು ಬಿಬಿಎಂಪಿ ಆಯುಕ್ತರ ಹಾಜರಿಗೆ ಆದೇಶಿಸಿದರು.