Saturday, July 30, 2011

ಪಿಂಚಣಿ ನಿಧಿ ಮಸೂದೆ: ಸರ್ಕಾರಕ್ಕೆ ಬಿಜೆಪಿ ಬೆಂಬಲ

ಪಿಂಚಣಿ ನಿಧಿ ಮಸೂದೆ: ಸರ್ಕಾರಕ್ಕೆ ಬಿಜೆಪಿ ಬೆಂಬಲ
ನವದೆಹಲಿ (ಪಿಟಿಐ): ಎಡಪಕ್ಷಗಳ ಆಗ್ರಹದ ಮೇರೆಗೆ ಪಿಂಚಣಿ ನಿಧಿ ನಿಯಂತ್ರಣ ಮಸೂದೆ ವಿರುದ್ಧ ಲೋಕಸಭೆಯಲ್ಲಿ ಗುರುವಾರ ಮತವಿಭಜನೆಗೆ ಸೂಚಿಸಿದಾಗ ಬಿಜೆಪಿ ಅದನ್ನು ಬೆಂಬಲಿಸಿ ಸರ್ಕಾರವನ್ನು ಮುಜುಗರದಿಂದ ಪಾರು ಮಾಡಿತು.

ಈ ಮಸೂದೆ ವಿರುದ್ಧ ಮತವಿಭಜನೆಗೆ ಅವಕಾಶ ನೀಡಿದ ಸಂದರ್ಭದಲ್ಲಿ ಆಡಳಿತ ಪಕ್ಷಗಳ ಸಂಸದರು ಕಡಿಮೆ ಸಂಖ್ಯೆಯಲ್ಲಿ ಇದ್ದುದರಿಂದ ಆತಂಕದ ಸನ್ನಿವೇಶ ನಿರ್ಮಾಣವಾಗಿತ್ತು.

ಈ ಮುನ್ನ ಪಿಂಚಣಿ ನಿಧಿ ನಿಯಂತ್ರಣ ಮತ್ತು ಅಭಿವೃದ್ಧಿ ಪ್ರಾಧಿಕಾರ ಮಸೂದೆ-2011ರ ವಿರುದ್ಧ ಮತವಿಭಜನೆಗೆ ಅವಕಾಶ ಕಲ್ಪಿಸಬೇಕು ಎಂದು ಸಿಪಿಎಂ ನಾಯಕ ಬಸುದೇವ ಆಚಾರ್ಯ ಒತ್ತಾಯಿಸಿದರು. ನಂತರ ಸ್ಪೀಕರ್ ಮೀರಾ ಕುಮಾರ್ ಮತವಿಭಜನೆಗೆ ಸೂಚಿಸಿದರು.

ಆ ವೇಳೆ ಸದನದಲ್ಲಿ 543 ಸದಸ್ಯರ ಪೈಕಿ 159 ಸದಸ್ಯರು ಮಾತ್ರ ಹಾಜರಿದ್ದರು. ಬಿಜೆಪಿಯ 30 ಸಂಸದರು ಸೇರಿ 115 ಸದಸ್ಯರು ಮಸೂದೆಯ ಪರವಾಗಿ ಹಾಗೂ 43 ಸದಸ್ಯರು ವಿರುದ್ಧ ಮತ ಹಾಕಿದರು. ಒಬ್ಬ ಸದಸ್ಯರು ಮತದಾನದಿಂದ ಹಿಂದೆ ಸರಿದರು.

ಪ್ರಧಾನಿ ಮನಮೋಹನ್ ಸಿಂಗ್, ಸದನದ ನಾಯಕ ಪ್ರಣವ್ ಮುಖರ್ಜಿ, ಯುಪಿಎ ಅಧ್ಯಕ್ಷೆ ಸೋನಿಯಾ ಗಾಂಧಿ, ಮತ್ತಿತರ ಸಚಿವರು ಹಾಗೂ ಸದಸ್ಯರು ಈ ಸಂದರ್ಭದಲ್ಲಿ ಹಾಜರಿರಲಿಲ್ಲ. ಇದಕ್ಕೆ ಮುನ್ನ ಬಸುದೇವ ಅವರು ತಮ್ಮನ್ನು ಬೆಂಬಲಿಸುವಂತೆ ಬಿಜೆಪಿಯ ಎಲ್.ಕೆ.ಅಡ್ವಾಣಿ ಅವರನ್ನು ಕೋರಿದ್ದರು