Saturday, July 24, 2010

K P S C ಗೊಂದಲಗಳು

ಕರ್ನಾಟಕ ಲೋಕ ಸೇವಾ ಆಯೋಗದ ಕಾರ್ಯವೈಖರಿ ಬಗ್ಗೆ ಮತ್ತೊಮ್ಮೆ ಅಸಮಾಧಾನ ಬುಗಿಲೆದ್ದಿದೆ.
ಈ ಹಿಂದೆ ಲೋಕಸೇವಾ ಆಯೋಗದ ವಿರುದ್ದ ಸ್ವಜನ ಪಕ್ಷಪಾತ ,ಜಾತೀಯತೆ ಮುಂತಾದ ಆರೋಪಗಳಿದ್ದವು. ಜೊತೆಗೆ "ತಾಳಿಬಾಗ್ಯ " ಯೋಜನೆಯಂತಹ ವಿನೂತನ ಯೋಜನೆಗಳನ್ನ ಹುಟ್ಟುಹಾಕಿ ಬ್ರಷ್ಟಾಚಾರಕ್ಕೆ ಹೊಸ ಆಯಾಮವನ್ನೇ ನೀಡಿದ ಹೆಗ್ಗಳಿಕೆ ಇತ್ತು. ಆದರೆ "ಕೆಲವರ"ನಿರ್ಗಮನದಿಂದ ಆಯೋಗವು ಸ್ವಚ್ಚವಾಗುತ್ತದೆಂದೂ,ಹೊಸದಾಗಿ ನೇಮಿಸಲ್ಪಟ್ಟ ಸದಸ್ಯರು ಆಯೋಗಕ್ಕೆ ಕಾಯಕಲ್ಪ ನೀಡುತ್ತಾರೆಂದೂ ತಿಳಿದಿದ್ದ ನಿರುದ್ಯೋಗಿ ಯುವಕರಿಗೆ ಆಯೋಗ ಮತ್ತೊಮ್ಮೆ ಶಾಕ್ ನೀಡಿದೆ.
ಆಯೋಗವು ಇತ್ತೀಚಿಗೆ(ಜೂನ್ ೬) ನಡೆಸಿದ ಗೆಜೆಟೆಡ್ ಪ್ರೊಬೇಷನರ್ ನ ಪೂರ್ವಭಾವಿ ಪರೀಕ್ಷೆಯಲ್ಲಿ ಕನ್ನಡ ಐಚ್ಚಿಕ ವಿಷಯದ ಪ್ರಶ್ನೆಪತ್ರಿಕೆ ಬಹಳ ಸುಲಭವಾಗಿತ್ತೆಂದೂ, ಹತ್ತನೇ ತರಗತಿಯ ವಿದ್ಯಾರ್ಥಿಗಳು ಕೂಡ ಇದನ್ನು ಲೀಲಾಜಾಲವಾಗಿ ಉತ್ತರಿಸುವಂತಿದೆ ಎಂದು ಹಲವರು ಅಭಿಪ್ರಾಯಪಟ್ಟಿದ್ದಾರೆ. ಈ ಹಿನ್ನೆಲೆಯಲ್ಲಿ ಕನ್ನಡ ಐಚ್ಚಿಕ ಆಯ್ಕೆಮಾಡಿಕೊಂಡಿರುವವರು ಮಾತ್ರ ಹೆಚ್ಚಿನ ಸಂಖ್ಯೆಯಲ್ಲಿ ಕೆ ಎ ಎಸ್ ಗೆ ಆಯ್ಕೆ ಯಾಗುವ ಸಂಭವವಿದೆ. ಉಳಿದವರ ಭವಿಷ್ಯ ಡೋಲಾಯಮಾನವಾಗುವ೦ತೆ ಕಾಣುತ್ತದೆ.
ಈ ಹಂತದಲ್ಲಿ ಬೇರೆಬೇರೆ ವಿಷಯಗಳನ್ನು ಆಯ್ಕೆ ಮಾಡಿಕೊಂಡಿರುವ ಘಟಾನುಘಟಿಗಳನ್ನು ಫಿಲ್ಟರ್ ಮಾಡಿಬಿಟ್ಟರೆ ಮೈನ್ಸ್ ನಲ್ಲಿ ಯಾವುದೇ ಪೈಪೋಟಿಇರುವುದಿಲ್ಲ. ಆಗ ಆಯ್ಕೆಯಾಗುವ ಮಂದಿಯಿಂದ ಹೆಚ್ಚಿನ ಲಾಭಬರುತ್ತದೆ ಎಂಬ ಸದುದ್ದೇಶ ಕೂಡ ಆಯೋಗಕ್ಕೆ ಇರಬಹುದು.
ಒಂದೊಂದು ಸಾರಿಯೂ ಒಂದೊಂದು ವಿಷಯದ ಪತ್ರಿಕೆ ಅತಿ ಸುಲಭವಾಗಿರುವಂತೆ ನೋಡಿಕೊಳ್ಳುವ ಪರಿಪಾಠವನ್ನು ಆಯೋಗ ಮೊದಲಿಂದಲೇ ಇಟ್ಟುಕೊಂಡಿತ್ತು. ಆದರೆ ಈ ಅದ್ಹಪತನದ ರಸತಾಳವನ್ನೇ ತಲುಪಿದಂತಿರುವ ಈ ಬಾರಿಯ "ಕನ್ನಡ" ಐಚ್ಚಿಕದಿಂದಾಗಿ ಚಿಕ್ಕಮಕ್ಕಳೂ ಸಹ ಕೆ ಪಿ ಎಸ್.ಸಿ .ಅಭ್ಯರ್ಥಿಗಳನ್ನು ಗೇಲಿಮಾಡುವಂತಾಗಿದೆ.


ಪರೀಕ್ಷೆ ಮುಗಿದನಂತರ ಹತಾಶರಾಗಿ ಆಯೋಗದ ಅಧ್ಯಕ್ಷರನ್ನು ಬೇಟಿ ಮಾಡಿದ ಕೆಲವು ಅಭ್ಯರ್ಥಿಗಳು ಸ್ಕೇಲಿಂಗ್ ಪದ್ದತಿಯನ್ನು ಅಳವಡಿಸುವಂತೆ ಬೇಡಿದ್ದಾರೆ. ಇನ್ನೂ ಕೆಲವರು ಮರುಪರೀಕ್ಷೆ ನಡೆಸಬೇಕೆಂದು ಆಗ್ರಹಿಸಿದ್ದಾರೆ. ಆ ಬೇಡಿಕೆಗಳಿಗೆ ಆಯೋಗ ಸ್ಪಂದಿಸಬೇಕಿದೆ.


ಈ ಹಿಂದೆ ನಡೆದ ಹಲವು ಹಗರಣಗಳ ಬಗ್ಗೆ ಹಿಂದಿನ ಆಯೋಗವು ಬೇಜವಾಬ್ದಾರಿಯ ಉತ್ತರಗಳನ್ನು ನೀಡುತ್ತ ಬಂದಿದೆ. ಈ ಬಾರಿಯೂ ಅದೇ ರೀತಿಯ ಉತ್ತರನೀಡದೆ ಕ್ರಿಯಾಶೀಲವಾಗಿ ವರ್ತಿಸಿ ಆಗಿರುವ ಪ್ರಮಾದವನ್ನು ಸರಿಪಡಿಸಿ ನ್ಯಾಯ ದೊರಕಿಸಿಕೊಡಬಹುದೆಂದು ಅಭ್ಯರ್ಥಿಗಳು ಆಶಿಸುತ್ತಿದ್ದಾರೆ. ಸರ್ಕಾರದ ನಿಯಮಗಳನ್ನು ಉಲ್ಲೇಖಿಸಿ ಆಯೋಗವು ತನ್ನ ಜವಾಬ್ದಾರಿಯಿಂದ ತಪ್ಪಿಸಿಕೊಳ್ಳಬಹುದಾದರೂ, ಒಂದು ಸಂವಿಧಾನಿಕ ಸಂಸ್ಥೆಯಾಗಿ ಆಯೋಗವು ಒಬ್ಬ ಗುಮಾಸ್ತಮಾಡಬಹುದ್ದಾದುದಕ್ಕಿಂತಾ ಹೆಚ್ಚಿನ ಕೆಲಸವನ್ನು ಮಾಡಲು ಶಕ್ತವಾಗಿರುವುದೆಂದು ನಿರೀಕ್ಷಿಸಲಾಗಿದೆ. 1998 ರಲ್ಲಿ ನಡೆದ ಹಗರಣದಿಂದಾಗಿ ಮುಖವಿಲ್ಲದನ್ತಾಗಿರುವ ಸಂಸ್ಥೆ ಈ ಬಾರಿ ಯಾವ ರೀತಿಯಲ್ಲಿ ವರ್ತಿಸುತ್ತದೆ ಎಂದು ಎಲ್ಲರೂ ಕುತೂಹಲದಿಂದ ಎದುರುನೋಡುತ್ತಿದ್ದಾರೆ.
some interesting Links-
http://www.indianexpress.com/oldStory/25115/

1 comment:

  1. ಕರ್ನಾಟಕ ಲೋಕಸೇವಾ ಆಯೋಗ ಮತ್ತೊಮ್ಮೆ ತನ್ನ ಬೇಜವಾಬ್ಧಾರಿ ಮನೋಬಾವವನ್ನು ಜಗಜ್ಜಾಹಿರಾತುಗೊಳಿಸಿದೆ. ಸಾಮಾನ್ಯವಾಗಿ ಯಾವುದೇ ವಿಷಯಕ್ಕೆ ಕೆಲವು ಆಕ್ಷೇಪಣೆಗಳು ಬಂದರೆ ಅವನ್ನು ಕೂಲಂಕಷವಾಗಿ ಪರಿಶೀಲಿಸಿ ತೀರ್ಮಾನಕ್ಕೆ ಬರುವುದು ಯಾವುದೇ ಘನತೆಯುತ ಸಂಸ್ಥೆಯ ಲಕ್ಷಣ. ಆದರೆ ಈ ಆಯೋಗವು ತಾನೊಂದು ಸಂವಿಧಾನಿಕ ಸಂಸ್ಥೆಎಂಬ ಹಣೆಪಟ್ಟಿ ಹಾಕಿಕೊಂಡ ಮಾತ್ರಕ್ಕೆ ಏನು ಬೇಕಾದರೂ ಮಾಡಬಹುದೆಂದು ತಿಳಿದುಕೊಂಡಂತಿದೆ. ೧೯೯೮ ರಿಂದಲೂ ಒಂದಲ್ಲ ಒಂದು ವಿವಾದವನ್ನು ಹುಟ್ಟುಹಾಕುತ್ತ ಬರುತ್ತಿರುವ ಆಯೋಗವು ನೈತಿಕ ಅಧಪತನದ ಮಾರ್ಗದಲ್ಲಿ ಹೊಸಹೊಸ ಪ್ರಾಕಾರವನ್ನು ಅನ್ವೇಷಿಸುವ ಕಾರ್ಯದಲ್ಲಿ ಅವಿರತವಾಗಿ ಕಾರ್ಯೂನ್ಮುಖವಾಗಿದೆ. ಪ್ರತಿಯೊಂದು
    ಪರೀಕ್ಷೆಯ ಕೊನೆಯಲ್ಲೂ ಅಭ್ಯರ್ಥಿಗಳನ್ನು ಅಚ್ಚರಿಗೊಳಿಸುವಲ್ಲಿ ಕರ್ನಾಟಕ ಲೋಕಸೇವಾ ಆಯೋಗವು ಎಂದೂ ವಿಫಲವಾಗಿಲ್ಲ. ಆಯೋಗವು ತನ್ನ ಈ ನಿರ್ಲಜ್ಜ ವ್ಯವಹಾರವನ್ನು ಬದಲಾಯಿಸಿಕೊಂಡು ಜನಪರಕಾಳಜಿಯುಳ್ಳ ಸಂಸ್ಥೆಯಾಗಿ ಮಾರ್ಪಡಬೇಕು. ಮುಂದಿನದಿನಗಳಲ್ಲಾದರೂ ಆಯೋಗಕ್ಕೆ ಸರ್ಕಾರ ಶುದ್ದ ಚಾರಿತ್ರ್ಯವುಳ್ಳವರನ್ನು ನೇಮಿಸುತ್ತದೆ ಎಂದು ಆಶಿಸೋಣ. ಇದು ಬಹುಶಃ ಸಾಧ್ಯವಾಗದ ಕನಸು. ದೇಶಾದ್ಯಂತ ಹಲವು ರಾಜ್ಯಗಳಲ್ಲಿರುವ ಲೋಕಸೇವಾ ಆಯೋಗಗಳು ಅವುಗಳ ಎಡಬಿಡಂಗಿ ವ್ಯವಹಾರದಿಂದ ಅಲ್ಲಿನ ಯುವಜನಾಂಗಕ್ಕೆ ತಲೆನೋವಾಗಿದೆ. ಈಗಾಗಲೇ ಪಂಜಾಬ್ ಪಿ ಎಸ್.ಸಿ ನ್ಯಾಯಾಲಯದಿಂದ ಛೀಮಾರಿ ಹಾಕಿಸಿಕೊಂಡಿದೆ. ಸಂವಿಧಾನಕ್ಕೆ ತಿದ್ದುಪಡಿ ತಂದು ಈ ಸಂಸ್ಥೆಯನ್ನೇ ಮುಚ್ಚಿ ಇಲ್ಲಿನ ಕಳ್ಳಕಾಕರನ್ನೆಲ್ಲಾ ಮನೆಗೆ ಕಳುಹಿಸುವ ಅಗತ್ಯವಿದೆ. ಇಲ್ಲಿನ ಕಳ್ಳ ಸಂಪಾದನೆಯಿಂದ ಇಲ್ಲಿ ನಿವೃತ್ತರಾದಮೇಲೆ ಒಳ್ಳೊಳ್ಳೆ ಆಯೋಗಗಳ ಅಧಿಕಾರಗಳಿಸಬಹುದು ಎಂದು ಇಲ್ಲಿನ ಅಯೋಗ್ಯರು ಆರಾಮವಾಗಿರಬಹುದು. ಆದುದರಿಂದ ಈ ಇವರುಗಳ ಮೇಲೆ ಸಾರ್ವಜನಿಕರು ಒಂದು ಕಣ್ಣಿಡುವುದು ಒಳ್ಳೆಯದು.

    ReplyDelete